Friday, August 22, 2014

ಕರ್ಮ



'ಕರ್ಮ' ಕಾದಂಬರಿಕಾರರಾದ ಕರಣಂ ಪವನ ಕುಮಾರ್ ರಿಗೆ ತಮ್ಮ ಪುಸ್ತಕದ ಬಗ್ಗೆ ನನ್ನ ಮೆಚ್ಚುಗೆ ನುಡಿ .

ಈ ಪುಸ್ತಕ ಬಿಡುಗಡೆಯಾದಾಗಿನಿಂದ ಏನೋ ಕುತೂಹಲವಿತ್ತು ಆದರೆ  ತಿಂಗಳ ಹಿಂದೆ ಕೊಂಡೆ.
 ಈಗಿನ ಪೀಳಿಗೆಯ ಹಾಗು ಹಿಂದಿನವರ ನಡುವಿನ ಶೀತಲ ಸಮರ ಧರ್ಮದ, ನಿತ್ಯಕರ್ಮದ ಆಚರಣೆ ಬಗ್ಗೆ ಇರುವ ಗೊಂದಲ, ತಾತ್ಸಾರಗಳ ಬಗ್ಗೆ ನಿಮ್ಮ ನಿರೂಪಣೆ ಚೆನ್ನಾಗಿದೆ. ಈಗಿನ ನಮ್ಮವರ ಜೀವನಶೈಲಿಯ ಬಗ್ಗೆ,  ಹಿರಿಯರ ಬಗ್ಗೆ ಗೌಣವಾಗಿರುವ ಗೌರವ, ತನಗೋಸ್ಕರ ಬದುಕುವ ಚಟ, ತನ್ನ ಚಟ ಚಟುವಟಿಕೆಯಿಂದ ತನ್ನ ಕುಟುಂಬಕ್ಕೆ ಹಾಗು ತನ್ನ ಸಂಬಂಧಿಕರಿಗೆ ಆಗುವ ನಷ್ಟವೇನು ಎನ್ನುವ ಉಡಾಫೆ.ನೀವು ಈ ಕಾದಂಬರಿಯಲ್ಲಿ ಬರೆದಿರುವ ಲಿವ್ಇನ್ ಸಂಬಂಧ ಹಾಗು ವೈಫ್ ಸ್ವಾಪಿಂಗ್ ಬಗ್ಗೆ ನಾವು ಕೇಳಿದ್ದೇವೆ ಆದರೆ ನಾವು ಬೆಳೆದು ಬಂದ ಸಂಸ್ಕೃತಿ ಹಾಗು ಬೆಳೆಸಿಕೊಳ್ಳುತ್ತಿರುವ ಸಂಸ್ಕೃತಿ ಬಗ್ಗೆ ಹೇಸಿಗೆ ಆಗುತ್ತದೆ. 
ನಿಮ್ಮ ನಂಬಿಕೆ ಹಾಗು ಶ್ರದ್ದೆ ಬಗ್ಗೆ ಬರುವ ವಿಚಾರಗಳು ಚಿಂತನೆಗೆ ಹಚ್ಚುತ್ತವೆ, ಹೌದು ನಮ್ಮ ಪೀಳಿಗೆಯವರಿಗೆ ಹಿಂದೂ ಸಂಸ್ಕೃತಿಯ ಆಚಾರ ವಿಚಾರಗಳ ಬಗ್ಗೆ ಗೊಂದಲ,ಕೀಳರಿಮೆ,ಉಡಾಫೆ ಮನೋಭಾವ  ಬೆಳೆಯಲು ಕಾರಣಗಳು ನೂರಾರಿವೆ. ಹಿಂದಿನ ಕಾಲದಲ್ಲಿ ವಿದ್ಯೆಯಲ್ಲಿ ಲೌಕಿಕ  ಹಾಗೂ ಸಂಸ್ಕೃತಿಯ ಜ್ಞಾನವನ್ನು ವಿಂಗಡಣೆ ಮಾಡದೆ ಅಭ್ಯಯಿಸುತ್ತಿದ್ದರು ಆದರೆ ಈ ಕಾಲದಲ್ಲಿ ಪೋಷಕರು ಕೆಲಸಗಳಿಸುವ, ಹೆಚ್ಚು ಸಂಪಾದನೆ ಮಾಡುವ ವಿಷಯಗಳ ಬಗ್ಗೆ ಮಕ್ಕಳನ್ನು ಚಿಕ್ಕವಯಸ್ಸಿನಿಂದ ಅಭ್ಯಯಿಸಲು ಪ್ರಚೋದಿಸುತ್ತಾರೆ. ನಮ್ಮ ಆಚಾರ ವಿಚಾರಗಳ ಬಗ್ಗೆ ಗೌರವ ಇಲ್ಲದ್ದರಿಂದ ಸೂರಿಯ ಹಾಗೆ ಸಂಸ್ಕೃತಿ ಹೀನರಾಗಿದ್ದೇವೆ. 
ಇನ್ನು ನಿಮ್ಮ ಇನ್ನೊಬ್ಬ ಪಾತ್ರಧಾರಿ ನೇಹಾ ಅನಾಚರ ಸಂಸ್ಕೃತಿಗೆ ಕಳಶವಿದ್ದಂತೆ, ಹೆತ್ತ ತಂದೆ ತಾಯಿಗಳು ಮಕ್ಕಳ ಪಾಲನೆ ಪೋಷಣೆ ಹಾಗು ಪ್ರೀತಿ ಕೊಡದಿದ್ದರೆ ಮಕ್ಕಳಿಗೆ ಸಮಾಜದಲ್ಲಿ ಯಾರ ಬಗ್ಗೆಯು ಗೌರವ ಬರುವುದಿಲ್ಲಯೆಂದು ನೇಹಳನ್ನು ಚಿತ್ರಿಸಿದ್ದೀರ. 
ಯಾವುದೆ ವಿಚಾರದ ಬಗ್ಗೆ ಒಂದು ಕಾದಂಬರಿ ಬರೆಯಬೇಕು ಅಂದರೆ ಪೂರ್ವ ತಯಾರಿಯ ಬಗ್ಗೆ ( ನಾನು ಭೈರಪ್ಪ, ಚಿದಾನಂದ ಮೂರ್ತಿ, ರವಿ ಬೆಳೆಗೆರೆ, ಪ್ರತಾಪ ಸಿಂಹ  ಹಾಗು ಡ್ಯಾನ್ ಬ್ರೌನ್ ಅಭಿಮಾನಿಯಾಗಿ) ಹೇಳಬೇಕಾಗಿಲ್ಲ ಹಾಗು ನಿಮ್ಮ ಕಾದಂಬರಿಯಲ್ಲಿ ಇದು ತುಂಬಾ ತೂಕ ಕೊಟ್ಟಿದೆ. 
ನಾನು ನಿಮ್ಮ ಪುಸ್ತಕ ಓದಿದ ತಕ್ಷಣ ನನ್ನಿಂದ ಬಂದ ವಿಮರ್ಶೆಯಿಂದ ಅಮ್ಮ ಮರುಕ್ಷಣದಿಂದಲೇ ಓದಲು ಪ್ರಾರಂಭ ಮಾಡಿದ್ದಾರೆ ಹಾಗು ತಮ್ಮ ಮೆಚ್ಚುಗೆ ಸೂಚಿಸಿದ್ದಾರೆ. ನಿಮ್ಮ ಮುಂದಿನ ಎಲ್ಲ ಸಾಹಿತ್ಯ ಕೃಷಿ ಹಾಗು ನಾಟಕಗಳಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ.

© ಮಹೇಶ್ ಕಶ್ಯಪ್

No comments:

Post a Comment