Monday, September 28, 2015

ಬದಲಾದ ಭಾರತ ಅಂದು ಇಂದು


ಹತ್ತು ಹದಿನೈದು ವರ್ಷಗಳ ಹಿಂದೆ ಐಟಿ ಅಳವಡಿಸುವಾಗ ಜನರ ನಿರುತ್ಸಾಹ, ತಾತ್ಸಾರ
ಇದರಿಂದ ಏನು ಪ್ರಯೋಜನ ? ಐಟಿ ಓದಿದವರಿಗೆ ಮಾತ್ರ ಲಾಭ, ಇದರಿಂದ ಜನ ಸಾಮಾನ್ಯರಿಗೆ ಯಾವ ಪ್ರಯೋಜನ ? ಎಂದವರೇ ಹೆಚ್ಚು. ಇಂದು ಲಾಭಪಡೆದೂ ಸಹ
ಭಾರತ ಏನೂ ಬದಲಾಗಿಲ್ಲ ಎನ್ನುವರು ಕಡಿಮೆ ಇಲ್ಲ. ಆದರೆ ಹಲವು ದಶಕಗಳಿಂದ ಜಡತ್ವ ಕಂಡ ನಮಗೆ ಕೆಳಗಿನಕೆಲವು ಬದಲಾವಣೆ ಕಂಡಿದ್ದರೆ ಖುಷಿ ಪಡೋಣ ಹಾಗೂ ನಮ್ಮ ದೇಶದ ಬಗ್ಗೆ ಹೆಮ್ಮೆ ಪಡೋಣ ಅಲ್ವಾ!
ನಮ್ಮ ಹಣ ವಾಪಸ್ಸು ಪಡೆಯಲು ಸರತಿಯಲ್ಲಿ ನಿಂತು, ಗೋಗರೆದು, ಕೈಮುಗಿದು ದಿನ ವಾರಗಟ್ಟಲೆ ಅಥವಾ ತಿಂಗಳುಗಟ್ಟಲೆ ಅಲೆಯುತ್ತಿದ್ದ ಪ್ರಸಂಗಗಳು ಕಂಡ ನಮಗೆ, ಇಂದು ಯಾರನ್ನೂ ದಮ್ಮಯ್ಯ ಅನ್ನದೆ ಕೆಲವು ಕ್ಷೇತ್ರದಲ್ಲಿ ( ಬ್ಯಾಂಕಿಂಗ್, ಪಿ ಎಫ್, ವಿಮೆ, ಸಾರಿಗೆ, ತೆರಿಗೆ ಹಾಗು ಇನ್ನೂ ಹಲವು ) ಅಂತರ್ಜಾಲ ಬಂದು ಆಮೂಲಾಗ್ರ ಬದಲಾವಣೆ ಕಂಡಿದ್ದೇವೆ.
ಹಣ ಪಾವತಿ ಮಾಡಲು ಅಂತರ್ಜಾಲ ಬಂದು ನಮ್ಮ ದಿನಚರಿಯಲ್ಲಿ ಹಾಗೂ ವ್ಯವಹಾರದಲ್ಲಿ ಪಾರದರ್ಶಕತೆ ಹೆಚ್ಚಾಗಿ ಭ್ರಷ್ಟತೆ ತಗ್ಗಿದೆ, ಯಾರಿಗೂ ಗೊಡ್ಡು ಸಲಾಮು ಹೊಡೆಯದೆ ನಮ್ಮ ಹಕ್ಕಿನ ಸೇವೆಯ ಲಾಭ ಪಡೆಯುವಂತಾಗಿದೆ.
ಬದಲಾದ ಚಿತ್ರಣವೆಂದರೆ ಅಂದು ಬ್ಯಾಂಕುಗಳಲ್ಲಿ ನಮ್ಮ ಖಾತೆಯ ಹಣ ಪಡೆಯಲು ಹಾಗೂ ಸಾಲ ಪಡೆಯಲು ಬೇಡ ಬೇಕಾಗಿತ್ತು ಇಂದು ನಮಗೆ ಬೇಡವೆಂದರೂ ಸಾಲ ಕೊಡಲು ಬ್ಯಾಂಕುಗಳು ಸಂಪರ್ಕಿಸುತ್ತವೆ. ಹಿಂದೆ ಬ್ಯಾಂಕಿನ ಯಾವುದೇ ವ್ಯವಹಾರ ಸುಸೂತ್ರವಾಗಿ
ಮುಗಿಯಲು ನಮಗೆ ಪರಿಚಯವಿದ್ದರೆ ಮಾತ್ರ ಅನ್ನುವ ಹಾಗಿತ್ತು, ಆದರೆ ಇಂದು ಎಷ್ಟು ಬದಲಾವಣೆ ಅಲ್ವಾ?
ಇನ್ನು ಸಾರಿಗೆ ಕ್ಷೇತ್ರಕ್ಕೆ ಬಂದರೆ, ಪರಸ್ಥಳಕ್ಕೆ ಹೋಗಲು ಮುಂಗಡವಾಗಿ ಟಿಕೇಟು ಪಡೆಯಲು ಆಯ ನಿಲ್ದಾಣಕ್ಕೆ ಹೋಗಿ ಸಿಂಬಂಧಿ ಇದ್ದರೆ ಹಾಗೂ ಸಾಲು ಕಡಿಮೆ ಇದ್ದರೆ ನಮ್ಮ ಪುಣ್ಯ, ಇಲ್ಲದಿದ್ದರೆ ಮಾಮೂಲಿಯಾಗಿ ಕುರಿಗಳು ತುಂಬಿದಂತೆ ನಿಂತುಕೊಳ್ಳಲೂ
ಜಾಗವಿಲ್ಲದೆ ನಿರ್ವಾಹಕನ ಸಹಪ್ರಯಾಣಿಕರ ಜೊತೆ ವಾಗ್ವಾದ ಮಾಡಿಕೊಂಡು ಊರ ನಿರೀಕ್ಷಿಸಬೇಕಾಗಿತ್ತು . ಇನ್ನು ಪ್ರಯಾಣ ರದ್ದಾದರೆ ಹಣ ವಾಪಸ್ಸು ಪಡೆಯಲು ನಾವು
ಪೂರ್ವ ಜನ್ಮಮದ ಪುಣ್ಯ ಇರಬೇಕಾಗಿತ್ತು, ಆದರೆ ಇಂದು ಎಷ್ಟು ಬದಲಾವಣೆ ಅಲ್ವಾ?
ಹೌದು ನಾವು ಬೇರೆ ಮುಂದುವರಿದ ರಾಷ್ಟ್ರಗಳಿಗೆ ಹೋಲಿಸಿಕೊಂಡರೆ ಕಾಲು ಭಾಗ ಪಯಣಿಸಿದ್ದೀವಿ, ಎಲ್ಲಾ ಸೇವೆಗಳು ಆನ್‌ಲೈನ್ ಆಗಿ ಇನ್ನಷ್ಟು ಪಾರದರ್ಶಕ ಹಾಗು ಭ್ರಷ್ಟರಹಿತವಾದರೆ ನಮ್ಮ ಭಾರತ ಸುಭದ್ರವಾಗುತ್ತದೆ.
ನಾನಿಲ್ಲಿ ಯಾವುದೇ ಸರ್ಕಾರದ ಪರವಾಗಿ ಮಾತಾಡುತ್ತಿಲ್ಲ ಯಾಕೆಂದರೆ ಈ ಬದಲಾವಣೆಗಳು ನಾವು ಕಂಡಿರುವುದು ತಂತ್ರಜ್ಞಾನದ ಅಳವಡಿಕೆಯ ಪ್ರಭಾವದಿಂದ, ಅದನ್ನು ಯಾವ ಸರ್ಕಾರವೇ ಮಾಡಿರಲಿ ಅವರಿಗೆ ಶ್ಲಾಘನೆ. ಈ ಯುಗದಲ್ಲಿ ಬದಲಾವಣೆಗಳನ್ನು ತರಲು ಸರ್ಕಾರಗಳು ತುದಿಗಾಲಲ್ಲಿ ನಿಲ್ಲಬೇಕು ಹಾಗೂ ಬದಲಾವಣೆಯ
ಲಾಭ ಪಡೆಯಲು ನಾವು ಸನ್ನದ್ಧರಾಗಬೇಕು, ಆಲ್ವ ಏನಂತೀರಿ ಗೆಳೆಯರೆ ?

Monday, September 14, 2015

ಗಣೇಶನ ಹಬ್ಬ




 ಗಣೇಶನ ಹಬ್ಬ ಎಂದರೆ  ಇಂದಿಗೂ ನೆನಪಾಗಿ ಕಾಡುವುದು ನಮ್ಮ ಪಾತಜ್ಜಿ ಮನೆ, ಮೂರೋ ನಾಲ್ಕೋ ಜನ ವಾಸ ಯೋಗ್ಯವಾದ ಮನೆಯಲ್ಲಿ, ಹಬ್ಬದ ಸಮಯ ಬರೋಬ್ಬರಿ ಹತ್ತರಿಂದ ಹದಿನೈದು ಜನ ವಾಸ.
ಅದು ಬೆಂಗಳೂರಿನ ಹಳೆಯ ಬಡಾವಣೆ ಯಶವಂತಪುರದ ಒಂದು  ಗಲ್ಲಿಯಲ್ಲಿನ ಪುಟ್ಟ ವಠಾರದಲ್ಲಿ ಒಂದು ಸಣ್ಣ ಮನೆ ( ನಿಜ ಹೇಳಬೇಕು ಎಂದರೆ ನಮಗೆ ಇಂದಿಗೂ ನಮ್ಮ ಬಾಲ್ಯದ ನೆನಪುಗಳ ರಾಶಿ ತುಂಬಿರುವ ಅರಮನೆ )

ಗಣೇಶನ ವ್ರತ ನಿಜ ಹೇಳಬೇಕು ಎಂದರೆ ಒಂದು ನೆಪ, ದೇವರಮೇಲಿನ ಭಕ್ತಿಗಿಂತ ಅಂದು ನಾವು ನಮ್ಮ ಏಲ್ಲಾ ನೆಂಟರನ್ನು ನೋಡುವ, ನಮ್ಮ ಸೋದರ(ದರಿ)ಗಳ ಜೊತೆ ಆಡುವ ಹರಟುವ ಸಂಭ್ರಮ. ಮೊದಲೇ ನಮ್ಮ ತಾತ  ಹೆಬ್ಬಾಲೆ ವೆಂಕಟಾಚಲಯ್ಯನವರು ಪುರೋಹಿತರು, ಅಜ್ಜಿ ಪಾರ್ವತಮ್ಮ ( ಪಾತಜ್ಜಿ ) ಪಾಕ ಪ್ರವೀಣೆ, ಯಾಕೆ ಈ ಪೀಟಿಕೆ ಎಂದರೆ ನಮ್ಮ ತಾತ ಪೂಜೆಮಾಡಿಸಿ ತಂದ ದವಸ, ಧಾನ್ಯ, ಹಣ್ಣು , ತರಕಾರಿ ಇದರ ಮೇಲೆ ಹಬ್ಬಕ್ಕೆ ಬಂದ ಮಕ್ಕಳು ಮೊಮ್ಮಕ್ಕಳಿಗೆ ಖುಷಿಪಡಿಸುವ ಸಲುವಾಗಿ ದಾರಾಳವಾದ ಕೈ, ನಮ್ಮ ಅಜ್ಜಿ ಮೊದಲೇ ಪಾಕ ಪ್ರವೀಣೆ ಇರುವ ಸಾಮಗ್ರಿಗಳಲ್ಲೇ, ಬೆಳಕೇ ಕಾಣದ ಚಿಕ್ಕ ಅಡುಗೆ ಮನೆಯಲ್ಲಿ ಇಪ್ಪತೈದರಿಂದ ಮೂವತ್ತು ಜನಗಳಿಗೆ ಹೊಟ್ಟೆತುಂಬಿ ಸುಸ್ತಾಗಿ ಮಲಗುವ ಹಾಗೆ ಅಡುಗೆ ಮಾಡುತ್ತಿದರು. ನಿಜ ಹೇಳ್ಬೇಕು ನಮಗೆ ಗಣೇಶನ ಹಬ್ಬವೆಂದರೆ ಊಟ, ಆಟ ಮತ್ತು ಹಾಡುಗಳು, ಅಂದು ನಾವೇ ಪಿಬಿಎಸ್ ಅಥವಾ ಎಸ್‌ಪಿಬಿ, ಗಣೇಶ ನೆಪ ಮಾತ್ರ.

ಹೌದು, ಹಬ್ಬ ಎಂದರೆ ಬರಿ ನೆಪ ಮಾತ್ರ, ಎಲ್ಲರೂ ಕೂಡಿ ಸಡಗರದಿಂದ ಓಡಾಡಿ, ಕಷ್ಟಾ ಸುಖಗಳನ್ನು ಮನೆಯ ಹಿರಿಯರೊಂದಿಗೆ ಹಂಚಿಕೊಂಡು, ಇರುವುದರಲ್ಲೇ ಆನಂದ ಪಡೆಯುವ ದಿನವೇ ಹಬ್ಬ ಅಲ್ವಾ. ಇಂದು ಬೇಕಾದ ತಿನಿಸುಗಳು ಅಂಗಡಿಯಲ್ಲಿ ಸಿಗುತ್ತದೆ, ಮೈ ತುಂಬಾ ಕಣ್ಣು ಕುಕ್ಕುವ ದಿರಿಸು ಆಭರಣಗಳು ಇರುತ್ತವೆ ಆದರೆ ಹಬ್ಬದ ದಿನ ಏನೂ ಇಲ್ಲದ್ದಾಗಿನ ಖುಷಿ ಇರುವುದಿಲ್ಲ, ಅದೇ ಅಡಿಗರ ಸಾಲು 'ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ'

ಆ ಹಬ್ಬದ ಸಡಗರಗಳು ಬರಿಯ ನೆನಪು ಮಾತ್ರ, ಆದಿನಗಳು ಮತ್ತೆ ಮರಳಿದರೆ ? ಅಂದೇ ಗಣೇಶನ ಹಬ್ಬ! ಅಲ್ವಾ ?